ಮಂಗಳವಾರ, ಜನವರಿ 4, 2022

ರಸ್ತಾವಧೂತ

 ಹೆಬ್ಬಾವಿನ ಹಾಗೆ ಊರುದ್ದ ಮಲಗಿರುವ ಸೋಮಾರಿ ರಸ್ತೆಯ ನಿರ್ಭಾವುಕ ಮೌನವೇ ಒಂದು ಸೋಜಿಗ...


ತುಳಿದವರೆಷ್ಟು ಬಾಯಿಗೆ ಕವಳ ಹಾಕಿ ಉಗಿದವರೆಷ್ಟು

ಮೂರೂ ಬಿಟ್ಟು ಚಡ್ಡಿ ಬಿಚ್ಚಿ ಉಚ್ಚೆ ಮಾಡಿದವರೆಷ್ಟು...


ಪುರಸಭೆಯ ಆದಾಯದ ಮೂಲ..

ಅಗೆದರೂ ಬಗೆದರೂ ಗುಂಡಿ ಮುಚ್ಚಿದರೂ...

ಕೊನೆಗೆ ಹಾಳು ಬಿಟ್ಟರೂ .. 



ಬಿದ್ದು ಹೊರಳಾಡುವ ಕುಡುಕರಿಗೆ ಹಂಸತೂಲಿಕೆಯೂ

ಸತ್ತು ಹೆಣವಾಗುವ ನತದೃಷ್ಟನಿಗೆ ಶರಶಯ್ಯೆಯೂ

ದಾರಿ ತಪ್ಪಿದ ಸಂಶಯಾತ್ಮನ ಹೊಸ ಸಾಧ್ಯತೆಯೂ

ಹೆಣ ಹೊತ್ತವರಿಗೂ ಕನಸು ಹೊತ್ತವರಿಗೂ ತಾನೆ ದಾರಿಯಾಗಿ

ಮಂದಿ ಮಾಗಧರ ಹೆಸರು ಮೆರೆಸುವ ಮಾಧ್ಯಮವೂ ಆಗಿಯೂ


ಏನೊ ಅಲ್ಲದ ತಪಸ್ವಿಯ ಹಾಗೆ ಸುಮ್ಮನೆ ಉದ್ದುದ್ದ

ಬಿದ್ದುಕೊಂಡ ರಸ್ತೆಯ ಅವಧೂತಚರ್ಯೆಗೆ ಶರಣು ಹೋಗಿರುವೆ..

ಗುರುವಾರ, ಸೆಪ್ಟೆಂಬರ್ 13, 2018

ಗಣಾರಾಧನೋತ್ಸವ

{ }


ಶೂನ್ಯಗಣವೆಂಬುದುಂಟು
ಏನೆಂದರೇನೂ ಇಲ್ಲ
ಗಜಕರ್ಣಾವರಣದ ಹೊರತು
ಎಲ್ಲಾ ಗಣಗಳಲ್ಲೂ  ಶೂನ್ಯಗಣವಿದೆ


{ x, y, z}
ನಮಗೆ ಬೇಕಾದಂತೆ ಗಣವಿಂಗಡಣೆ
ಮಾಡಬಹುದು
ಬಿಳಿಯರ ಕರಿಯರ
ಹಿರಿಯರ ಕಿರಿಯರ
ಹೀಗೆ ಬೇಕಾದಂತೆ

U

ನಾವೂ ನೀವೂ ಗಣಾಂಶಗಳೇ
ವಿಶ್ವಗಣದ ಗುಣಾಂಶಗಳೇ
ಮತ್ತದೇ ನಮಗೆ ಬೇಕಾದ
ನಮ್ಮದೇ ಗಣವನ್ನು ಮಾಡಿಕೊಳ್ಳಬಹುದು
ರಾಮನನ್ನೋ ರಹೀಮನನ್ನೋ ಆರಾಧಿಸಬಹುದು

{f(x)} x{f(y)}


ಹೀಗೇ ಗಣಯುಕ್ತಿ ಗಳಿಸಿ
ಶೂನ್ಯಗಣದೊಳು ಮೋದಕ
ತುಂಬಿಸಿ
ಸಲಗಸಮೂಹದಂತೆ ನಡೆಯೋಣ
ಬನ್ನಿ ವಿಶ್ವಗಣಾರಾಧನೆ ಮಾಡೋಣ


ಗಣಗಳೆಲ್ಲಾ ಒಡಲಾಗಲಿ
ತುಳಿಸಿಕೊಂಡೇರಿ ಬೆಳೆವ
ಗರಿಕೆಯ ಗ್ರಹಿಕೆ ಮುಡಿಯೇರಲಿ
ಸದಾಗ್ರಹದ ಮೋದಕದ ಮೋಹದ ಹಸಿವಿರಲೆಮಗೆ
ನಮ್ಮಾನೆಗೆ ನಮ್ಮಂಕುಶವಿರಲಿ
ವ್ಯಾಪ್ತರಾಗುವ ಹೃದಯಗಳಲಿ

ಮತ್ತೆ ಮನದ ಬೆಳಕಾಗಿ
ಮತ್ತೆ ಮನೆಯ ಬೆಳಕಾಗಿ
ಮತ್ತೆ ಜನರ ಬೆಳಕಾಗಿ
ಮತ್ತೆ ಜಗದ ಬೆಳಕಾಗಿ
ಬೆಳೆಯೋಣ
ಬರಿಯ ಗಣಾಂಶರಾಗದೇ
ಗಣಾಧಿಪರಾಗೋಣ
🕉️✡️🕉️✡️🕉️✡️🕉️✡️🕉️

ಭಾನುವಾರ, ಸೆಪ್ಟೆಂಬರ್ 2, 2018

ಆಹಾ...



ಇಲ್ಲ..
ಇವಳನ್ನು ಯಾವ ಹೂವಿಗೋ
ಹಣ್ಣಿಗೋ, ಅಪ್ಸರೆಗೋ
ಹೋಲಿಸಲಾರೆ
ಅವಳೊಂದು
ಹೊಸ ಉಪಮೆ

ಮಾದಕ ಮೋಹಕವೆಂದು
ಮೈ ಮರೆಯಲಾರೆ
ಹೃದಯದ ದನಿಯೆಂದು
ಕವಿತೆ ಬರೆಯಲಾರೆ
ಉರಿವ ಮೈಯಲ್ಲ
ಸಿಗದ ಮನಸಲ್ಲ
ಎಂದೂ ಚ್ಯುತಿ ಇರದ
ಅಂತರಾತ್ಮವೇ ಅವಳು

ಪ್ರೀತಿ ಎಂಬುದು
ಅವರಿವರ ಮಾತಿನ ಹಳಸು ನಕಲು ನನ್ನ ಕವಿತೆಯಲ್ಲ

ನನ್ನದೋ ನಿನ್ನ
ತನುಮನದ ಹಂಗಿಲ್ಲದ
ಆತ್ಮಾನುಭಾವ

ಗುರುವಾರ, ಮಾರ್ಚ್ 1, 2018

ಚಂದಮಾಮ



ಕನಸುಗಳ ಬಿತ್ತುತ್ತ
ನಭವೆಲ್ಲ ಬೆಳೆಯುತ್ತ
ಬಂದಿಹನು ಚಂದಮಾಮ

ಯಾರು ಕೇಳದ ಕಾಡು
ಎಂದೂ ಮರೆಯದ ಹಾಡು
ತಂದಿರುವ ಚಂದಮಾಮ

ಅಪ್ಪ ಮೊದಲಿಗೆ ಕೊಟ್ಟ
ಹೊಳೆವ ನಾಣ್ಯದ ನೆನಪು
ತಂದಿರುವ ಚಂದಮಾಮ

ಕರೆದ ನೊರೆಹಾಲನ್ನು
ಅಮ್ಮ ಕುಡಿಸಿದ ಹಾಗೆ
ನಗುತಿರುವ ಚಂದಮಾಮ

ಮೈಮರೆತ ನಿದ್ದೆಯಲೂ
ಕನಸುಗಳ ಜಾಗರದಲೂ
ಸಹಪಯಣಿಗ ಚಂದಮಾಮ

ಊರು ಸೂರುಗಳಾಚೆ
ಮಾತು ಮೌನಗಳಾಚೆ
ಕಬ್ಬಿಗನು ಚಂದಮಾಮ

ಶುಕ್ರವಾರ, ಮೇ 5, 2017

ದಶಾವತಾರ



ಬಡ ಭಿಕ್ಷುಕನೊಬ್ಬ
ಒಣ ರೊಟ್ಟಿಯಲಿ
ಕಂಡಮೃತವ

ದಾರಿಹೋಕನು
ಮರದನೆಳಲಲಿ
ಕಂಡಮರಾವತಿಯ

ಹಸುಕಂದನು
ತಾಯ ಮಡಿಲಲಿ
ಕಂಡ ವೈಭವವ

ಬಡತನದ ಬೇಗೆಯಲಿ
ದುಡಿಮೆಫಲದ
ಸವಿಯ

ಒಂಟಿ ಕಾಲನ
ಶೂಲದಿ ಅವಳ
ಮುಗುಳುನಗೆ ಬೆಳಕ

ಅರಿಯಲಾದರೂ
ಅನುಭವಿಸಲಾದರೂ
ಅವತರಿಸಲೇಬೇಕಾಯ್ತು
ಅವನಿಯಲವಗೆ

ಶನಿವಾರ, ಏಪ್ರಿಲ್ 15, 2017

ಮ್ಮ್ ವ್ವಾ



ನಾನು ಬರೆಯುವುದಲ್ಲ ಕವಿತೆ
ಎಲ್ಲೋ ಇರುತ್ತದೆ ಅದರ
ಪಾಡಿಗೆ ಸುಮ್ಮನೇ
ನಾನು ಹುಟ್ಟುವ
ಮೊದಲೇ
ಇದ್ದಂತೆ
ನನ್ನಮ್ಮ
ಹೆತ್ತಂತೆ
ನನ್ನನ್ನು ಹಡೆದುಬಿಡುತ್ತದೆ
ನಾನು ಅತ್ತಾಗ
ನೀವು ಸಕ್ಕರೆ ತಿನ್ನುವಿರಿ
ಅಷ್ಟೇ

ಭಾನುವಾರ, ಏಪ್ರಿಲ್ 9, 2017

ಬೇಗೆ



ನನ್ನ ಕವಿತೆಗಳು
ಬೇಗೆಯಲಿ ಒಣಗುತ್ತಿವೆ
ಅದೂ ಒಂದು ಪ್ರಕ್ರಿಯೆ
ಈ ವಿರಹದಂತೆ

ಬಿಸಿಲು ಕುಡಿದು
ಗಟ್ಟಿಯಾಗಿ ಚಿಗುರಲಿವೆ
ಮಳೆಗೆ ನೀ ಬಿತ್ತಿದಂತೆ

ಬೇಗೆಯ ಕನಸಿನಿಂದಲ್ಲವೇ
ಮೋಡ ಕಟ್ಟುವುದು
ಮಳೆ ಕರಗುವುದು
ಹಸಿರು ಮೊಳೆಯುವುದು

ನನಗೂ ಕನಸು ಕಾಡುತಿವೆ
ಹಗಲೂರಾತ್ರಿ ಪದವರಸಿ
ಹೊರಟ ಸಾಲಿನ ಸೆರಗಿನಂತೆ
ನಿನ್ನ ಹಾಡಿನಂತೆ